ಈ ವರ್ಷದ ಪಿಯು ಫಲಿತಾಂಶ ಮತ್ತು ದಲಿತರು
----------------------------------------------------------------
ಪ.ಜಾತಿ, ಪ.ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮಕ್ಕಳು +2 ಹಂತದಲ್ಲಿ ಹೇಗೆ ಸಾಧನೆ ಮಾಡಿದ್ದಾರೆ? ಅವರ ಸಾಧನೆ ಸರ್ಕಾರ, ಸಮಾಜ ಮತ್ತು ಖುದ್ದು ಪ.ಜಾತಿ/ಪ.ಪಂಗಡ/ಹಿಂದುಳಿದವ ವರ್ಗಗಳವರು ಸಮಾಧಾನ, ಹೆಮ್ಮೆ ಪಟ್ಟುಕೊಳ್ಳುವ ಹಾಗೆ ಇದೆಯೆ? ಸಾಧನೆಯು ಕಡಿಮೆ ಇರುವುದಾದರೆ, ಅದನ್ನು ಉತ್ತಮಪಡಿಸಲು ಏನು ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು? ಸಮುದಾಯ ಸಂಘಟನೆಗಳು ಕೈಗೊಳ್ಳಬೇಕು? ಇತ್ತೀಚಿನ ಪಿಯು ಪರೀಕ್ಷೆಯ ಫಲಿತಾಂಶದ ಹಿನ್ನೆಲೆಯಲ್ಲಿ
ಒಂದು ಚಿಂತನೆ ಇಲ್ಲಿದೆ.
-------------------------------------------------------------------------------
ಈ ವರ್ಷದಲ್ಲಿ ರಾಜ್ಯದಲ್ಲಿ ಪಿಯು ಪರೀಕ್ಷೆ ಬರೆದವರು ಒಟ್ಟು 5.97,618 ಮಕ್ಕಳು. ಇವರಲ್ಲಿ ಪ.ಜಾತಿಗಳಿಗೆ ಸೇರಿದ ಮಕ್ಕಳು 1,21,553. ಅಂದರೆ, ಸುಮಾರು 16%ರಷ್ಟಿರುವ ಪ.ಜಾತಿಗಳವರು ಒಟ್ಟು ಸಂಖ್ಯೆಯಲ್ಲಿ 20.34ರಷ್ಟು ಪ್ರಾತಿನಿಧ್ಯವನ್ನು ಪಿಯು ಪರೀಕ್ಷೆ ಬರೆದವರಲ್ಲಿ ಪಡೆದುಕೊಂಡಿದ್ದಾರೆ. ಅರ್ಥಾತ್, ಪ.ಜಾತಿಗಳವರು ತಮ್ಮ ಜನಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚಿನ ಮಟ್ಟಿಗೆ ಪಿಯು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಬಹುದು. ಹೀಗೆಯೆ, ಈ ವರ್ಷ ಈ ಪರೀಕ್ಷೆ ಬರೆದಿರುವ ಪ.ಪಂಗಡಗಳ ಮಕ್ಕಳು 42,526. ಅಂದರೆ, ಸುಮಾರು 8.1%ರಷ್ಟಿರುವ ಪ.ಪಂಗಡಗಳವರು ಒಟ್ಟು ಸಂಖ್ಯೆಯಲ್ಲಿ 7.11ರಷ್ಟು ಪ್ರಾತಿನಿಧ್ಯವನ್ನು ಪಿಯು ಪರೀಕ್ಷೆ ಬರೆದವರಲ್ಲಿ ಪಡೆದುಕೊಂಡಿದ್ದಾರೆ. ಅರ್ಥಾತ್, ಪ.ಪಂಗಡಗಳವರು ತಮ್ಮ ಜನಸಂಖ್ಯಾ ಪ್ರಮಾಣಕ್ಕಿಂತ ತುಸು ಕಡಿಮೆ ಮಟ್ಟಿಗೆ ಪಿಯು ಶಿಕ್ಷಣ ಪಡೆಯುತ್ತಿದ್ದಾರೆ ಎಂದರ್ಥ.
ಈಗ ಇವರಲ್ಲಿ ಪಾಸ್ ಆದವರ ಸಂಖ್ಯೆ ಮತ್ತು ಪ್ರಮಾಣವನ್ನು ನೋಡೋಣ. ಒಟ್ಟು ಅಭ್ಯರ್ಥಿಗಳಲ್ಲಿ ಪ.ಜಾತಿಗಳವರು 41.9%ರಷ್ಟು ಪಾಸಾಗಿದ್ದಾರೆ. ಅಂದರೆ, 58.1%ರಷ್ಟು ಮಕ್ಕಳು ಫೇಲಾಗಿದ್ದಾರೆ. ಪ.ಪಂಗಡಗಳವರು 51%ರಷ್ಟು ಮಕ್ಕಳು. ಅಂದರೆ, 49%ರಷ್ಟು ಮಕ್ಕಳು ಫೇಲಾಗಿದ್ದಾರೆ. ಹಿಂದುಳಿದ ವರ್ಗಗಳಿಗೆ ಸೇರಿದ ಮಕ್ಕಳು 69%ರಷ್ಟು ಪಾಸಾಗಿರುವುದು ಅಂದರೆ 31%ರಷ್ಟು ಫೇಲಾಗಿರುವುದು ತಿಳಿದು ಬರುತ್ತದೆ. ಇನ್ನು ಮೀಸಲೇತರ ಗುಂಪಿನ ಮಕ್ಕಳು 71.60%ರಷ್ಟು ಪಾಸಾಗಿದ್ದು, 28.4%ರಷ್ಟು ಮಾತ್ರ ಫೇಲಾಗಿರುವುದು ಕಂಡು ಬಂದಿದೆ.
ಮೇಲಿನ ಅಂಕಿ-ಅಂಶಗಳನ್ನು ಅಭ್ಯಾಸ ಮಾಡಿದಾಗ, ಮೀಸಲೇತರ ಗುಂಪಿನ ಮಕ್ಕಳಿಗೆ ಹೋಲಿಸಿದಾಗ ಹಿಂದುಳಿದ ವರ್ಗಗಳ ಮಕ್ಕಳು ಹಿಂದುಳಿದಿದ್ದು, ಪ.ಪಂಗಡಗಳ ಮಕ್ಕಳು ಹೆಚ್ಚು ಹಿಂದುಳಿದಿದ್ದು ಮತ್ತು ಪ.ಜಾತಿಗಳ ಮಕ್ಕಳು ಅತಿ ಹೆಚ್ಚು ಹಿಂದುಳಿದಿರುವುದು ಗೊತ್ತಾಗುತ್ತದೆ.
ಇದು ನಿಜಕ್ಕೂ ಸರ್ಕಾರಕ್ಕಾಗಲಿ, ಸಮಾಜಕ್ಕಾಗಲಿ ಮತ್ತು ಖುದ್ದು ದುರ್ಬಲ ವರ್ಗಗಳಿಗಾಗಲಿ ಸಮಾಧಾನದ ವಿಷಯ ಅಲ್ಲ. ಈ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಮೇಲಿನ ಮೂರೂ ವಿಭಾಗಗಳವರು ನಿಷ್ಠಾಪೂರ್ವಕವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ.
ಮುಖ್ಯ ಅಡಚಣೆಗಳು
• ಹಿಂದುಳಿದ ವರ್ಗಗಳು, ಪ.ಪಂಗಡಗಳು ಮತ್ತು ಪ.ಜಾತಿಗಳು ನಮ್ಮ ಸಮಾಜದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸುತ್ತಿವೆ. ಇವರ ಮನೆಯಲ್ಲಿ ವಿದ್ಯಾವಂತರಿರುವುದು ಅಪರೂಪ. ಅಲ್ಲಿ ಇವರಿಗೆ ಸೂಕ್ತ ಮಾರ್ಗದರ್ಶನ ಸಿಗುವುದು ಕಠಿಣ.
• ಈ ಮಕ್ಕಳು ಆರ್ಥಿಕವಾಗಿ ಕೂಡ ತೊಂದರೆಗಳನ್ನು ಎದುರಿಸುತ್ತಿರುವುದು ನಿಜ. ಆದ್ದರಿಂದ, ಅಭ್ಯಾಸ ಮಾಡಲು ಇವರಿಗೆ ಅನೇಕ ಅಗತ್ಯ ಪರಿಕರಗಳು ದೊರಕುತ್ತಿಲ್ಲ ಎಂಬುದೂ ನಿಜ. ಈ ಮಕ್ಕಳು ಮನೆಕೆಲಸದಲ್ಲಿ ಮತ್ತು ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಚಿಕ್ಕ-ಪುಟ್ಟ ಕೆಲಸಗಳಲ್ಲಿ ತೊಡಗಬೇಕಿರುವುದು ಅನಿವಾರ್ಯ ಎಂಬುದೂ ನಿಜ.
• ಈ ಮಕ್ಕಳಿಗೆ ಅನೇಕ ಸಲ ಕಾಲೇಜುಗಳಲ್ಲಿ ಮತ್ತು ಮನೆ ಸುತ್ತಮುತ್ತ ಪ್ರೋತ್ಸಾಹ ದೊರಕುವುದು ಕೂಡ ಕಠಿಣ.
• ಈ ಮಕ್ಕಳು ಹಾಸ್ಟೆಲ್ ಸೌಲಭ್ಯ ಪಡೆದಿದ್ದರೆ, ಅಲ್ಲೂ ಇವರಿಗೆ ವಿದ್ಯಾಭ್ಯಾಸದಲ್ಲಿ ನಿಖರವಾದ ಮಾರ್ಗದರ್ಶನ ದೊರಕುವುದು ದುಸ್ತರ.
ಪರಿಹಾರಗಳು (ಸರ್ಕಾರದಿಂದ)
• ಮಕ್ಕಳನ್ನು ಕಾಲೇಜಿಗೆ ಕಳಿಸುತ್ತಿರುವ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ತಿಳಿದು, ಅಗತ್ಯ ಕಂಡುಬಂದಲ್ಲಿ ಸರ್ಕಾರದಿಂದ ಇಂಥ ಕುಟುಂಬಕ್ಕೆ ಆರ್ಥಿಕ ನೆರವನ್ನು ಒದಗಿಸಿ ಕೊಡಬಹುದು.
• ಬಡ ಕುಟುಂಬದ ಮಕ್ಕಳು ಪಠ್ಯ ಸಾಮಗ್ರಿಯನ್ನು ಖರೀದಿಸಲು, ಸರ್ಕಾರ ಅಗತ್ಯ ಆರ್ಥಿಕ ನೆರವನ್ನು ನೀಡಬಹುದು.
• ಪ್ರತಿ ಕಾಲೇಜಿನಲ್ಲಿ ಈ ಮಕ್ಕಳನ್ನು ತಂಡಗಳಲ್ಲಿ ವಿಭಜಿಸಿ, ಒಂದೊಂದು ತಂಡವನ್ನು ಅದೇ ಕಾಲೇಜಿನ ಉಪನ್ಯಾಸಕರ ನೇರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಗೆ ಒಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಿ, ಜಾರಿಗೊಳಿಸಬಹುದು.
• ಹಾಸ್ಟೆಲ್ನಲ್ಲಿರುವ ಮಕ್ಕಳಿಗೆ ನಿಯತವಾಗಿ ಪಠ್ಯ ಕುರಿತ ಮಾರ್ಗದರ್ಶನ ದೊರಕುವುದಕ್ಕೆ ಅಗತ್ಯವಾದ ಏರ್ಪಾಟನ್ನು ಸರ್ಕಾರ ಮಾಡಬಹುದು.
ಪರಿಹಾರಗಳು (ಸಮುದಾಯದಿಂದ)
• ದುರ್ಬಲ ಸಮುದಾಯಗಳಲ್ಲಿನ ವಿದ್ಯಾವಂತರು ಮಕ್ಕಳೊಂದಿಗೆ ನಿಯತವಾಗಿ ಸಂಪರ್ಕ ಇಟ್ಟುಕೊಂಡು, ಅವರಲ್ಲಿ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವುದು.
• ಸರ್ಕಾರದಿಂದ ಆಗಬೇಕಿರುವ ಕಾರ್ಯಗಳ ಅನುಷ್ಠಾನದ ಕಡೆ ನಿಗಾ ಇಡುವುದು.
• ಕಾಲೇಜು ಮಕ್ಕಳಿಗೆ ಅಗತ್ಯವಾದ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಿ ಕೊಡುವುದು.
• ಹಾಸ್ಟೆಲ್ಗಳಲ್ಲಿ ಪಠ್ಯ ಕುರಿತು ನೀಡಲಾಗುವ ಮಾರ್ಗದರ್ಶನದೊಂದಿಗೆ ಕೈಜೋಡಿಸುವುದು.
• ಸಮುದಾಯ ಸಂಘಟನೆಗಳ ಮೂಲಕ ಮಕ್ಕಳಿಗೆ ಉತ್ತೇಜನ, ಬಹುಮಾನ, ಪ್ರೋತ್ಸಾಹ ಪ್ರಕಟಿಸಿ, ಮಕ್ಕಳಲ್ಲಿ ಇಚ್ಛಾಶಕ್ತಿ ಬೆಳೆಯುವುದಕ್ಕೆ ಒತ್ತಾಸೆಯಾಗಿ ನಿಲ್ಲುವುದು.
ಈ ರೀತಿಯ ಹೆಜ್ಜೆಗಳಿಂದ ಪಿಯು ಹಂತದಲ್ಲಿ ಅಭ್ಯಾಸ ಮಾಡುತ್ತಿರುವ ದುರ್ಬಲ ವರ್ಗಗಳ ಮಕ್ಕಳು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವುದಕ್ಕೆ ಸಹಕಾರಿಯಾಗಲಿದೆ.
2019ರಲ್ಲಿ ಪಿಯು ಪರೀಕ್ಷೆ ಬರೆದ ಪ.ಜಾತಿಯವರು 1,19,865
ಇವರಲ್ಲಿ ಪಾಸಾದವರ ಪ್ರಮಾಣ 51.9%
2020ರಲ್ಲಿ ಪಿಯು ಪರೀಕ್ಷೆ ಬರೆದ ಪ.ಜಾತಿಯವರು 1,21,553
ಇವರಲ್ಲಿ ಪಾಸಾದವರ ಪ್ರಮಾಣ 41.9%
2019ರಲ್ಲಿ ಪಿಯು ಪರೀಕ್ಷೆ ಬರೆದ ಪ.ಪಂಗಡಗಳವರು 42,490
ಇವರಲ್ಲಿ ಪಾಸಾದವರ ಪ್ರಮಾಣ 53.3%
2020ರಲ್ಲಿ ಪಿಯು ಪರೀಕ್ಷೆ ಬರೆದ ಪ.ಪಂಗಡಗಳವರು 42,526
ಇವರಲ್ಲಿ ಪಾಸಾದವರ ಪ್ರಮಾಣ 51.%
ರಾಜ್ಯದ ಪರಿಸ್ಥಿತಿ ಕೂಡ ನೆಟ್ಟಗಿಲ್ಲ
2018ರಲ್ಲಿ ರಾಜ್ಯದಲ್ಲಿ ಎಷ್ಟು ಮಕ್ಕಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಪಾಸಾಗಿದ್ದರು ಎಂಬುದನ್ನು ತಿಳಿದುಕೊಂಡು, ಅವರಲ್ಲಿ ಎಷ್ಟು ಪ್ರತಿಶತ ಮಕ್ಕಳು ಪಿಯು ಹಂತ ಪ್ರವೇಶಿಸಿದರು ಎಂಬುದನ್ನು ಪತ್ತೆ ಮಾಡಿದರೆ, ಎಷ್ಟು ಪ್ರತಿಶತ ಮಕ್ಕಳು ಪಿಯು ಕಾಲೇಜ್ಗಳಿಂದ ಹೊರಗೆ ಉಳಿದರು ಎಂಬುದು ಗೊತ್ತಾಗುತ್ತದೆ. ಆ ಅಂಕಿ-ಅಂಶಗಳ ಆಧಾರದಲ್ಲೂ ರಾಜ್ಯದ ಶಿಕ್ಷಣ ಕ್ಷೇತ್ರದ ಪರಿಸ್ಥಿತಿಯ ಬಗ್ಗೆ ಷರಾ ಬರೆಯಬಹುದು.
ಹಾಗೆಯೆ, 2018ರಲ್ಲಿ ಎಷ್ಟು ಮಕ್ಕಳು ಪಿಯು ಪ್ರವೇಶ ಪಡೆದುಕೊಂಡರು? ಅವರಲ್ಲಿ ಎರಡನೇ ಪಿಯು ಪರೀಕ್ಷೆ ಬರೆಯುವ ಕಾಲದವರೆಗೆ ಎಷ್ಟು ಜನ ಉಳಿದುಕೊಂಡರು? ಈ ಮಾಹಿತಿ ಗೊತ್ತಾದಾಗ, ಈ ಹಂತದಲ್ಲಿ ಡ್ರಾಪ್ಔಟ್ ಆಗುವ ಮಕ್ಕಳ ಪ್ರತಿಶತ ಗೊತ್ತಾಗಿ, ಅದರ ಆಧಾರದಲ್ಲೂ ರಾಜ್ಯದ ಶಿಕ್ಷಣ ಕ್ಷೇತ್ರದ ಪರಿಸ್ಥಿತಿಯನ್ನು ವಿವರಿಸಬಹುದು.
ಈಗ 2020ರಲ್ಲಿ 2ನೇ ಪಿಯು ಪರೀಕ್ಷೆ ಬರೆದ ಮಕ್ಕಳ ಒಟ್ಟು ಮಕ್ಕಳ ಸಂಖ್ಯೆ ಗೊತ್ತಾಗಿದೆ. ಅದು, 5.97,618. ಇವರಲ್ಲಿ ಪಾಸಾದವರು ಎಷ್ಟು ಜನ? ಉತ್ತರ: 61.80%ರಷ್ಟು ಮಕ್ಕಳು. (ವಿಜ್ಞಾನದಲ್ಲಿ 76.2%ರಷ್ಟು ಮಕ್ಕಳು, ವಾಣಿಜ್ಯದಲ್ಲಿ 65.52%ರಷ್ಟು ಮಕ್ಕಳು ಮತ್ತು ಕಲಾ ವಿಭಾಗದಲ್ಲಿ 41.27%ರಷ್ಟು ಮಕ್ಕಳು ಪಾಸ್ ಆಗಿದ್ದಾರೆ). ಅಂದರೆ, 38.20ರಷ್ಟು ಮಕ್ಕಳು ಫೇಲಾಗಿದ್ದಾರೆ. ಇದು ರಾಜ್ಯದ ಶಿಕ್ಷಣ ಇಲಾಖೆಗೆ ಚಿಂತೆಯ ವಿಷಯವೇ ಸೈ. ಇನ್ನು
ಒಟ್ಟು ಮಕ್ಕಳಲ್ಲಿ ಬಾಲಕಿಯರು ತುಸು ಮುಂದಿದ್ದು, ಅವರ ಪ್ರತಿಶತ 68.73ರಷ್ಟಿದ್ದರೆ, ಬಾಲಕರ ಪ್ರತಿಶತ 54.77ರಷ್ಟು ಇದೆ. ಹಾಗೆಯೆ, ಗ್ರಾಮೀಣ 58.99ರಷ್ಟಿದ್ದು, ನಗರ ಪ್ರದೇಶದಲ್ಲಿನ ಮಕ್ಕಳು 62.60ರಷ್ಟಿದ್ದಾರೆ.
ಇದನ್ನು ಒಟ್ಟಾರೆ ವಿಶ್ಲೇಷಣೆಗೆ ಒಳಪಡಿಸಿದರೆ, ಇದು ಕೂಡ ಚಿಂತೆಯ ವಿಷಯವೇ ಆಗಿದೆ.
Contact: 94491-02294